21 ಮೇ 2011

ಬಾಳೆಕಾಯಿ ಬಿಳಿ ಹುಳಿ

   ಅಗತ್ಯ:
          ಬಾಳೆಕಾಯಿ ೨ 
          ತೆಂಗಿನತುರಿ ೧ ೧/೨ ಬಟ್ಟಲು
         ಮಜ್ಜಿಗೆ ೨ ಬಟ್ಟಲು 
         ಹಸಿಮೆಣಸು-೨
          ಬೆಳ್ಳುಳ್ಳಿ ೫-೬ ಎಸಳು
          ಕೊತ್ತಂಬರಿ ಬೀಜ೧/೨ ಚಮಚ
          ಕರಿಬೇವು 
          ನಿಂಬೆ ರಸ,ಅರಿಸಿನ, ಸಾಸಿವೆ
            ಸ್ವಲ್ಪ ಎಣ್ಣೆ
ವಿಧಾನ:
           ಬಾಳೆಕಾಯಿಯನ್ನು ಬೇಯಿಸಿ.
ಸಿಪ್ಪೆ ತೆಗೆದು, ಸಣ್ಣಗೆ ಹೆಚ್ಚಿಕೊಳ್ಳಿ .
          ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಹಸಿಮೆಣಸು, ಕೊತ್ತಂಬರಿ ಬೀಜ ಸಾಸಿವೆ ಹಾಕಿ ಸಣ್ಣನೆ ಉರಿಯಲ್ಲಿ ಹುರಿಯಿರಿ.
ಈ ಹುರಿದದ್ದನ್ನು ತೆಂಗಿನ ತುರಿಯ ಜೊತೆ ಹಾಕಿ ರುಬ್ಬಿ. ಬಾಳೇ ಕಾಯಿಯ ಜೊತೆ ಈ ಮಿಶ್ರಣ ವನ್ನು ಸೇರಿಸಿ  ಕುದಿಸಿ.
ಉಪ್ಪು ಸೇರಿಸಿ. ಚೆನ್ನಾಗಿ ಕುದಿ ಆದಮೇಲೆ ಕರಿಬೇವು ಹಾಕಿ..
ಇನ್ನೊಂದು ಕಡೆ ಚಿಕ್ಕ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ,ಬಿಸಿ ಮಾಡಿ ಸಾಸಿವೆ ಚಟ್ ಪಟ್ ಮಾಡಿ , ಬೆಳ್ಳುಳ್ಳಿ, ಅರಿಸಿನ ಸೇರಿಸಿ..
ಈ ಒಗ್ಗರಣೆಯನ್ನು ಹುಳಿ ಗೆ ಸೇರಿಸಿ,
ಒಲೆ ಆಫ್ ಮಾಡಿ   ಮಜ್ಜಿಗೆ, ನಿಂಬೆ   ರಸ ಸೇರಿಸಿ...
ಇದೆ ವಿಧಾನವನ್ನೇ ಹಲಸಿನ ಕಾಯಿಗೂ ಅನ್ವಯಿಸಿ...

ಹುಳಿ....ಹುಳಿಯಲ್ಲ .... ಸವಿ!


ಚಂದ್ರಿಕಾ ಹೆಗಡೆ

20 ಮೇ 2011

ಫ್ರೈ

ಬದನೆ ಫ್ರೈ
ಅಗತ್ಯ: 
  ಬದನೆ ಕಾಯಿ<                ೧
  ಮೆಣಸಿನ ಪುಡಿ, ಗರಂ ಮಸಾಲ ಪುಡಿ, ಉಪ್ಪು ಸೇರಿಸಿ ೧/೨ ಬಟ್ಟಲು
  ರವೆ ಸ್ವಲ್ಪ
  ಎಣ್ಣೆ
ಕಾವಲಿ  ಇಡಿ:
                  ಬದನೆ ಕಾಯಿ ವ್ರತ್ತಾಕಾರವಾಗಿ ಕತ್ತರಿಸಿ. ಈ ತುಂಡನ್ನು ಮಸಾಲ ಪುಡಿಯಲ್ಲಿ ಹೊರಳಾಡಿಸಿ.. 2ನಿಮಿಷ ಬಿಟ್ಟು ರವೆಯಲ್ಲಿ ಹೊರಳಾಡಿಸಿ. ಈಗ ಕಾದ ಕಾವಲಿಯಲ್ಲಿ ಎಣ್ಣೆ ಹಾಕಿ ಈ ಬದನೆ ತುಂಡುಗಳನ್ನು ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ...

ಹೀಗೆಯೇ ಹೀರೆ ಕಾಯಿ ಯಲ್ಲೂ ಮಾಡಬಹುದು.

ಸರಳತೆಯಲ್ಲಿ... ಅಡುಗೆ ಮನೆಗೆ ಪ್ರವೇಶ.....


ಚಂದ್ರಿಕಾ ಹೆಗಡೆ

19 ಮೇ 2011

ರವೆ ಕಸ್ಟರ್ಡ್ ಪಾಯಸ:



ಅಗತ್ಯ:
           ರವೆ( ಲೋಕಲ್) ೧/೨ ಬಟ್ಟಲು
           ತೆಂಗಿನ ಹಾಲು ೩ ಬಟ್ಟಲು
          ಸಕ್ಕರೆ ೧ ೧/೨ ಬಟ್ಟಲು
           ಕಸ್ಟರ್ಡ್ ಪುಡಿ ೨ ಚಮಚ
           ಗೋಡಂಬಿ, ದ್ರಾಕ್ಷಿ, ಬಾದಾಮ್
           ರವೆ ಹುರಿಯಲು ೨ ಚಮಚ ತುಪ್ಪ
  ತಯಾರಿ....
 ರವೆಯನ್ನು ತುಪ್ಪ ಹಾಕಿ ಹುರಿದು ಕೊಳ್ಳಿ. ತೆಂಗಿನ ಹಾಲಿನಲ್ಲಿ ಬೇಯಿಸಿ.. ಸಕ್ಕರೆ ಸೇರಿಸಿ.. ಕಸ್ಟರ್ಡ್ ಪುಡಿ, ಹುರಿದ ಗೋಡಂಬಿ ದ್ರಾಕ್ಷಿ ಹಾಕಿ. ಬಾದಾಮ್ ಸಣ್ಣಗೆ ಕತ್ತರಿಸಿ. ಸೇರಿಸಿ. 
 ಚಪಾತಿ ಜೊತೆ, ದೋಸೆ ಜೊತೆ ಒಳ್ಳೆ ರುಚಿ ಗೊತ್ತೇನ್ರಿ?

  ಕಡಿಮೆ ಅವಧಿ ಹೆಚ್ಚಿನ ತಯಾರಿ....



ಚಂದ್ರಿಕಾ ಹೆಗಡೆ

ರೈಸ್:

ತರಕಾರಿ ಮಿಶ್ರಿತ, ಜೀರಾ ರೈಸ್:

ಅಗತ್ಯ: 
             ಅನ್ನ- ೩ ಬಟ್ಟಲು  
            1 ಕ್ಯಾಪ್ಸಿಕಂ- ಹೆಚ್ಚಿದ್ದು
            2 ಎಳೆ ಜೋಳ -ಹೆಚ್ಚಿದ್ದು
            ಕ್ಯಾರೆಟ್- ೧/೨ ತುರಿದದ್ದು 
            ಹಸಿಮೆಣಸಿನ ಕಾಯಿ-೩
            ಜೀರಿಗೆ ೨ ಚಮಚ
            ಎಣ್ಣೆ - ೪ ಚಮಚ
             ಉಪ್ಪು- ರುಚಿಗೆ ತಕ್ಕಸ್ಟು
             ನಿಂಬೆ ರಸ - ೧ ಚಮಚ

ಶುರು:
           ಬಾಣಲೆಗೆ ಎಣ್ಣೆ  ಹಾಕಿ ಬಿಸಿ ಮಾಡಿ , ಅದಕ್ಕೆ ಜೀರಿಗೆ ಹಾಕಿ,ಎಳೆ ಜೋಳವನ್ನು  ಹಾಕಿ ಹುರಿಯಿರಿ , ಅರ್ಧ ಬೆಂದ ಮೇಲೆ ಅದಕ್ಕೆ 
            ಕ್ಯಾಪ್ಸಿಕಂ , ಹಸಿಮೆಣಸು ಹಾಕಿ ಹುರಿಯಿರಿ, ನಂತರ ಸ್ವಲ್ಪ ಉಪ್ಪು ಸೇರಿಸಿ ೧ ನಿಮಿಷ ಬೇಯಿಸಿ, ಅನ್ನ ಮಿಶ್ರಣ ಮಾಡಿ. ಕ್ಯಾರೆಟ್ ತುರಿ ಸೇರಿಸಿ... ಗ್ಯಾಸ್ ಆಫ್  ಮಾಡಿ. ನಿಂಬೆರಸ ರುಚಿಗೆ ತಕ್ಕಸ್ಟು ಉಪ್ಪು ಸೇರಿಸಿ ...
       ಈ ಅನ್ನ ವನ್ನು ಮೊಸರು ಸವತೆಕಾಯಿ ಸಲಾಡ್, ಇಲ್ಲವೇ ಯಾವದಾದರೂ ಗ್ರೆವಿಯ ಜೊತೆ ಸವಿಯ ಬಹುದು .
         

ಸರಳತೆಗೆ ಪ್ರಾಧಾನ್ಯ:
                             


ಚಂದ್ರಿಕಾ ಹೆಗಡೆ

ಮೆಂತೆ ಜ್ಯೂಸ್:!

 ಅಗತ್ಯ:
          ನೆನಸಿದ ಮೆಂತೆ ೧/೪ ಬಟ್ಟಲು
           ಬೆಲ್ಲ- ರುಚಿಗೆ
          ಚಿಟಿಕೆ ಉಪ್ಪು
          ಏಲಕ್ಕಿ 
ಗೀರ್ರ್ರ್ :  
                   ಮಿಕ್ಸಿ ಜಾರಿನಲ್ಲಿ ಮೆಂತೆ ನೀರು ಹಾಕಿ ತರಿ ತರಿಯಾಗಿ ರುಬ್ಬಿ . ಪಾತ್ರೆಗೆ ಹಾಕಿ ಹೆಚ್ಚಿಗೆ ನೀರು ಸೇರಿಸಿ ಬೆಲ್ಲ ಏಲಕ್ಕಿ ಪುಡಿ ಚಿಟಿಕೆ ಉಪ್ಪು ಹಾಕಿ .....
                                 ಇದರಲ್ಲೇ ಇನ್ನೊಂದು ವಿಧಾನ: ಮೆಂತೆಯನ್ನು ಬೇಯಿಸಿ ರುಬ್ಬಿ ಬೆಲ್ಲ ಏಲಕ್ಕಿ ಉಪ್ಪು ಹಾಕಿ ಮಾಡಬಹುದು. ಈ ವಿಧಾನದಲ್ಲಿ ಮೆಂತೆಯ  ಕಹಿ ರುಚಿ ಸಿಗುವದಿಲ್ಲ...
                     ಈ ಪಾನೀಯ ಕೂಡ ಆಯಾಸ ಪರಿಹಾರಕ್ಕಾಗಿ ಮಲೆನಾಡಿನಲ್ಲಿ ಬೇಸಿಗೆಯ ಸಮಯದಲ್ಲಿ , ಸದಾ ಸಿದ್ದ ಮಾಡುತ್ತಿದ್ದ ಜನಪದೀಯ ಪಾನೀಯ ಎನ್ನಬಹುದು....
                   

                                ರಸವೆ ನಿನಗಿದೋ ಧನ್ಯವಾದ!
                
      
                          ಕೂಲ್
                                      ಚಂದ್ರಿಕಾ ಹೆಗಡೆ

ಹೆಸರು ಕಾಳಿನ ....ಆಸ್ರಿಗೆ....

ಅಗತ್ಯ:
           ನೆನಸಿ ಮೊಳಕೆ ಕಟ್ಟಿದ ಹೆಸರು ಕಾಳು ೧/೨ ಕಪ್
           ಬೆಲ್ಲ- ರುಚಿಗೆ ತಕ್ಕಸ್ಟು
           ಉಪ್ಪು- ಸವುಳು ಹೊಡೆಯಲು:) 
           ಏಲಕ್ಕಿ ಪುಡಿ- ಬೇಕೆನಿಸಿದರೆ...
ಪವರ್ ಇದ್ದು ಅಲ್ದ?
                      ಹೆಸರು ಕಾಳನ್ನು ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ
                           ಬೆಲ್ಲ , ನೀರು, ಉಪ್ಪು ಸೇರಿಸಿ.... ಬೇಕಾದ್ರೆ ಏಲಕ್ಕಿ ಪುಡಿ ಹಾಕಿ...ಇದನ್ನು ಇನ್ನೊಂದು ವಿಧಾನದಲ್ಲೂ ಮಾಡುತ್ತಾರೆ: ಹೆಸರು ಕಾಳನ್ನು ಬೇಯಿಸಿ , ಅದನ್ನು ರುಬ್ಬಿ.... ಆದರೆ ಹಸಿಯಾಗಿ ಬಳಸಿದರೆ ಆರೋಗ್ಯದ ದೃಷ್ಟಿಯಿಂದ ಹಿತಕರವೆಂದು ನಾನು ಹಸಿ ಹೆಸರು ಬಳಸಿದ್ದೇನೆ.
ಪಕ್ಕನೆ ಇದನ್ನು ಮಾಡುವದು ನೆನಪಾಗಿದ್ದು: 
ಸುಮಾರು ಎಪ್ರಿಲ್ ಮೇ ತಿಂಗಳು ಗಳಲ್ಲಿ  ಘಟ್ಟದ  ಕೆಳಗಿನಿಂದ ಕೆಲಸ ಮಾಡುವದಕ್ಕೆ ಘಟ್ಟದ ಮೇಲೆ ಬರುತ್ತಿದ್ದ  ಆಳುಗಳಿಗೆ ಆಯಾಸ ಪರಿಹಾರಕ್ಕೆಂದು ಮಾಡುತ್ತಿದ್ದ ಪಾನೀಯ...ಇದಕ್ಕೆ ಬಳಸುವ ಹೆಸರು ಕಾಳು , ಬೆಲ್ಲ ದೇಹಕ್ಕೆ ನವ ಉಲ್ಲಾಸವನ್ನು ತರುವದಂತೂ ನಿಜ! ಹೀಗೆ ನೆನಪಾಗಿ ತಯಾರಿಸಿದೆ....
                 ಸರಳ ರಸಾಸ್ವಾದನೆ ಮತ್ತೂ ಹಿತಕರ! ದೇಹಕ್ಕೂ ... ಮನಸಿಗೂ...
                 
                     ರಸಾಸ್ವಾದನೆಗೂ ಬೇಕು ಮನಸು.....
                                  ರಸೋಲ್ಲಾಸದಲ್ಲಿ:
                                                           ಚಂದ್ರಿಕಾ ಹೆಗಡೆ

13 ಮೇ 2011

ಸಿಹಿ ಗೆಣಸಿನ ಪರೋಟ

ಅಗತ್ಯ:
             ಸಿಹಿ ಗೆಣಸು ಬೇಯಿಸಿ  ರುಬ್ಬಿದ್ದು- ೨ ಕಪ್
             ಸಕ್ಕರೆ ಪುಡಿ ೫  -೬ ಚಮಚ( ಬೆಲ್ಲ ಹಾಕಿದರೂ ಒಳ್ಳೇದೆ!)
             ಗೋದಿ ಹಿಟ್ಟು  ೪ ಕಪ್
              ಏಲಕ್ಕಿ ಪುಡಿ ೧/೨ ಟೀ ಚಮಚ
             ಹಿಟ್ಟಿಗೆ ರುಚಿಗೆ ತಕ್ಕಸ್ಟು ಉಪ್ಪು.
             ತುಪ್ಪ
             ಹಿಟ್ಟು ಕಲೆಸುವದಕ್ಕೆ ೫-೬ ಚಮಚ ಬಿಸಿ ಮಾಡಿದ ಎಣ್ಣೆ.

ಪಟಾ ಪಟ್ :
ಗೋದಿ ಹಿಟ್ಟನ್ನೇ ಆದಷ್ಟು ಬಳಸಿ....
   ಸರಿ ಹಿಟ್ಟನ್ನು ಬಿಸಿ ಎಣ್ಣೆ, ಅಗತ್ಯಕ್ಕೆ ತಕ್ಕಸ್ಟು ನೀರು, ಉಪ್ಪು  ಸೇರಿಸಿ ಕಲೆಸಿಕೊಳ್ಳಿ. ಆಯ್ತಾ? ಹುಂ... ಈಗ ಗೆಣಸಿನ ಮಿಶ್ರಣಕ್ಕೆ ಎಲ್ಲಕ್ಕಿ ಪುಡಿ, ಸಕ್ಕರೆ ಪುಡಿ ಸೇರಿಸಿ...
ತವಾ  ಇಡಿ ಬೇಗ..... 
              ಗೋದಿ ಹಿಟ್ಟಿನ ಸಣ್ಣ ಉಂಡೆ ... ಅಡಿಕೆ ಗಾತ್ರದ್ದು... ಮಾಡಿ... ತಟ್ಟಿಸಿ... ೨ ಚಿಕ್ಕ ಚಿಕ್ಕ ಚಪಾತಿಯ ತರಹ
              ಎರಡರ ಮಧ್ಯ ಈ ಗೆಣಸಿನ ಮಿಶ್ರಣ  ಸೇರಿಸಿ... ತುದಿಯನ್ನು ಬೆರಳಿನಿಂದ ಮಡಚಿ... ಇಲ್ಲವೇ ನಿಧಾನವಾಗಿ ಲಟ್ಟಿಸಿ...
ತವಾ ಕಾದಿದ್ರೆ ಅದಕ್ಕೆ ಈ ಪರೋಟ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ...
                         ಅದಕ್ಕೆ ತುಪ್ಪ ಸೇರಿಸಿ ತಿನ್ನಿ... ಚಂದ್ರಿಕಾ ಥ್ಯಾಂಕ್ಸ್... ಅನ್ನಿ!

........ಸವಿಯ ಸಮಯ...
                                      ಚಂದ್ರಿಕಾ ಹೆಗಡೆ

ಹೆಸರು ಕಾಳು ದೋಸೆ

ಕಾಲೇಜಿನಲ್ಲಿಯ ಒಬ್ಬರು ಸಹೋದ್ಯೋಗಿಗಳು ಹೇಳಿದ್ದು ಕೇಳಿ ಮನೆಯಲ್ಲಿ ಮಾಡಿದ್ದು.....



ಅಗತ್ಯ:  ಹೆಸರುಕಾಳು ನೆನಸಿದ್ದು - ೨ ಕಪ್
            ಅಕ್ಕಿ ನೆನಸಿದ್ದು             - ೧ ಕಪ್
            ಚಿಟಿಕೆ ಸೋಡಾ
            ಈರುಳ್ಳಿ  ಸಣ್ಣಗೆ ಹೆಚ್ಚಿದ್ದು - ೧ ಕಪ್
           ಸ್ವಲ್ಪ ಜೀರಿಗೆ, ಕೊತ್ತಂಬರಿ ಸೊಪ್ಪು,ರುಚಿಗೆ ಉಪ್ಪು.

ರೆಡಿ!:
         ರಾತ್ರಿ ನೆನೆ ಹಾಕಿದ ಅಕ್ಕಿ, ಹೆಸರು ಕಾಳನ್ನು ಬೆಳಿಗ್ಗೆ ಜೀರಿಗೆ,ಕೊತ್ತಂಬರಿ ಸೊಪ್ಪು, ಸೇರಿಸಿ ರುಬ್ಬಿ.  ಸ್ವಲ್ಪ  ಸೋಡಾ ಬೆರೆಸಿ ಉಪ್ಪು ಸೇರಿಸಿ.
ತವಾದ ಮೇಲೆ ಸ್ವಲ್ಪ ಎಣ್ಣೆ ಸವರಿ ಮಾಮೂಲು ದೋಸೆ ತರಹ ಹುಯ್ದು...ಮೇಲೆ ಈರುಳ್ಳಿ  ಹಾಕಿ. ರೆಡಿ...
ಇದರ ಜೊತೆ ಮಧ್ಯದಲ್ಲಿ ಉಪ್ಪಿಟ್ಟನ್ನು ಹಾಕಿ "ಪೆಸರಿಟ್ಟು" ಮಾಡಬಹುದು ಅಂತ ಆ ಸಹೋದ್ಯೋಗಿ  ಹೇಳಿದ್ದರು... ಯಾಕೋ ನನಗೆ ಅಸ್ಟು ಆ ಕೊಂಬಿನೆಶನ್ ಇಷ್ಟ  ಆಗಲಿಲ್ಲ... ಅದಕ್ಕೆ ಕೇವಲ ಹೆಸರು ಕಾಳು ದೋಸೆ...ಕಾಯಿ ಚಟ್ನಿ ಜೊತೆ ಸೂಪರ್....
ನನ್ನ "ಉದಯ್"  ಇನ್ನು ಮುಂದೆ ಮಾಡಬಹುದು ಅಂತ ಹೇಳಿದ್ದಾನೆ. ಅದಕ್ಕೆ ಧೈರ್ಯದಿಂದ  ಬರೆಯುತ್ತಿದ್ದೇನೆ!



ಜೀವನದ ಜೊತೆ ಪ್ರೀತಿಯ ಹೆಜ್ಜೆ....

                                          ಚಂದ್ರಿಕಾ ಹೆಗಡೆ